Step into an infinite world of stories
Fiction
ನಾವು ಭಾಗವಾಗಿರುವ ಈ ಕಾಲಕ್ಕೆ ಕೆಲ ವಿಶೇಷ ಗುಣಗಳಿವೆ. ಅಪರಿಚಿತರು ಅಥವಾ ಸುಮಾರಾಗಿ ಪರಿಚಿತರಾದವರ ಬಗ್ಗೆ ಕೆಲ ಬೇಸಿಕ್ ಮಾಹಿತಿ ಇಟ್ಟುಕೊಂಡು ಅವರ ರಾಜಕೀಯ ಒಲವು, ನಿಲುವುಗಳ ಬಗ್ಗೆ ತೀರಾ ಸುಲಭವಾಗಿ ಅಷ್ಟೇನೂ ಸ್ಪಷ್ಟವಲ್ಲದ ಅಭಿಪ್ರಾಯಕ್ಕೆ ಬಂದು ಬಿಡಬಹುದು. ಯಾರದೇ ಮನೆಗೆ ಮೊದಲ ಬಾರಿಗೆ ಭೇಟಿ ಕೊಟ್ಟಾಗಲೂ, ಅವರು ಮನೆಗೆ ತರಿಸುತ್ತಿರುವ ಪತ್ರಿಕೆ ಯಾವುದೆಂದು ತಿಳಿದರೂ ಸಾಕು, ಅವರ ಬಗ್ಗೆ ಒಂದು ಅಭಿಪ್ರಾಯಕ್ಕೆ ಬಂದುಬಿಡುವ ಸಾಧ್ಯತೆ ಇದೆ. ಇದೇ ರೀತಿ ಈಗ್ಗೆ ಮೂರ್ನಾಲ್ಕು ವರ್ಷಗಳ ಹಿಂದೆ ಎಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ, ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಪಾಠ ಮಾಡುವ ಯುವಕ ಈ ಹೊತ್ತಿನ ಸಾಮಾಜಿಕ, ಆರ್ಥಿಕ, ರಾಜಕೀಯ ವಿಚಾರಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಊಹಿಸಬಹುದು. ಆದರೆ, ಎಚ್.ಕೆ.ಶರತ್ ವಿಚಾರದಲ್ಲಿ ಆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿರುತ್ತವೆ. ಇದು ಶರತ್ ಅವರ ಎರಡನೇ ಲೇಖನಗಳ ಸಂಗ್ರಹ. ಮೊದಲನೆಯದನ್ನು ತೊದಲು ಎಂದರು. ಎರಡನೆಯದಕ್ಕೆ ಎರಡು ಗೋಡೆಗಳ ಚೌಕಟ್ಟು ಹಾಕಿ ಇ-ಬುಕ್ ಮಾದರಿಯಲ್ಲಿ ಮುಕ್ತವಾಗಿ ಹರಿಯಬಿಟ್ಟಿದ್ದಾರೆ. ಅವರೇ ಪದೇ ಪದೇ ಒಡನಾಡಿಗಳಲ್ಲಿ ಹೇಳಿಕೊಳ್ಳುವಂತೆ, ಅವರ ಅನುಭವಗಳೇ ಬರಹಗಳಿಗೆ ಆಧಾರ. ಆ ಕಾರಣಕ್ಕೆ ಅವರು ಅತೀ ಸೂಕ್ಷ್ಮ ನೋಡುಗ, ಕೇಳುಗ ಹಾಗೂ ಭಾಗೀದಾರ. ಇತ್ತೀಚೆಗಂತೂ ನಮ್ಮ ಮಾತು, ಹರಟೆ ಮಧ್ಯೆ ಕೆಲ ವಿಶಿಷ್ಟ ಎನ್ನುವುದೇನಾದರೂ ಘಟಿಸಿ ಹೋದರೆ, ಒಮ್ಮೆ ಶರತ್ ನತ್ತ ಕಣ್ಣು ಹಾಯಿಸಿ, ‘ಸದ್ಯದಲ್ಲೇ ಇದು ಯಾವುದೋ ಪತ್ರಿಕೆಗೆ ಆಹಾರ ಆಗಬಹುದು’ ಎಂದು ಅನೇಕರು ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲ, ಹಲವು ಬಾರಿ ಆ ಭವಿಷ್ಯ ನಿಜವಾಗಿದೆ.
ಸದ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗೆ ತೆರೆದುಕೊಂಡಿರುವ ಬಹುತೇಕರು ಆಗಾಗ ಚರ್ಚೆ ಮಾಡುವ ಬಹುತೇಕ ಎಲ್ಲಾ ವಿಚಾರಗಳನ್ನು ಶರತ್ ಚರ್ಚಿಸಿದ್ದಾರೆ. ಹಾಗೂ ಆ ಎಲ್ಲಾ ವಿಚಾರಗಳಲ್ಲೂ ಅವರ ನಿಲುವನ್ನು ಸ್ಪಷ್ಟವಾಗಿ ಹೇಳುತ್ತಾರೆ. ತಮ್ಮ ವಯೋಮಾನಕ್ಕೆ ದಕ್ಕಿದ ಅನುಭವ ಹಾಗೂ ಸಾಮಾನ್ಯ ಜ್ಞಾನ (ತಿಳವಳಿಕೆ)ಗಳನ್ನು ಮುಂದೆ ಮಾಡಿ ತಮ್ಮ ನಿಲುವನ್ನು ಸಮರ್ಥಿಸುತ್ತಾರೆಯೇ ಹೊರತು, ಅದಕ್ಕೆ ಯಾವ ಸಿದ್ಧಾಂತದ ಮೊರೆ ಹೋಗುವುದಿಲ್ಲ.
ಮೀಸಲಾತಿ ಬಗ್ಗೆ ಬರೆಯುವಾಗ, ಮೊದಮೊದಲು ತನಗೂ ಅದರ ಬಗ್ಗೆ ಬೇರೆಯದೇ ಅಭಿಪ್ರಾಯ ಇತ್ತು, ಆದರೆ ಜಾತಿ ವ್ಯವಸ್ಥೆಯ ವಿಕಾರಗಳು ಅರ್ಥವಾಗುತ್ತಿದ್ದಂತೆಯೇ ಗ್ರಹಿಕೆ ಬೇರೆ ಆಯಿತು ಎನ್ನುತ್ತಾರೆ. ಅಭಿಪ್ರಾಯ ಬದಲಾಗಲು ತನ್ನ ಸುತ್ತಲಿನ ಆಗುಹೋಗುಗಳಿಗೆ ಅವರು ಮುಕ್ತವಾಗಿ ತೆರೆದುಕೊಂಡಿದ್ದೇ ಕಾರಣ. ಹೆಚ್ಚು ಕಮ್ಮಿ ಅವರೊಟ್ಟಿಗೆ ವಿದ್ಯಾಭ್ಯಾಸ ಆರಂಭಿಸಿದ ಅನೇಕ ಮಂದಿ ಇಂದಿಗೂ ಮೀಸಲಾತಿ ವಿರೋಧಿ ಧೋರಣೆಯಲ್ಲೇ ಬಿದ್ದು ನೇತಾಡುತ್ತಿರಬಹುದು. ಕಾರಣ ಅವರಿಗೆ ಜಾತಿ ವ್ಯವಸ್ಥೆಯ ವಿಕಾರಗಳು ಕಣ್ಣಿಗೆ ಬೀಳದಿರಬಹುದು ಅಥವಾ ಬಿದ್ದಿದ್ದರೂ ಅವರ ಅರಿವನ್ನು ಎಚ್ಚರಿಸುವ ಮಟ್ಟಕ್ಕೆ ಪರಿಣಾಮ ಬೀರಿಲ್ಲ. ಇದರೊಟ್ಟಿಗೆ ಬಲಾಢ್ಯರು ಮೀಸಲಾತಿ ಸೌಲಭ್ಯ ಪಡೆಯುವ ಬಗ್ಗೆ ಶರತ್ ಅವರಿಗೆ ತಕರಾರಿದೆ. ಶತಮಾನಗಳ ಕಾಲ ಅನುಭವಿಸಿದ ಜಾತಿ ಕೇಂದ್ರಿತ ಶೋಷಣೆ ಆರ್ಥಿಕ ಸ್ವಾತಂತ್ರ್ಯದಿಂದ ಅಂತ್ಯ ಕಂಡಿದೆ ಎಂಬ ತೀರ್ಮಾನಕ್ಕೆ ಸ್ವಲ್ಪ ಅವಸರದಲ್ಲೇ ಬಂದಂತೆ ಕಾಣುತ್ತಾರೆ. ಆದರೆ, ಆ ಅಭಿಪ್ರಾಯ ಮುಂದೆ ಬದಲಾಗಬಹುದು. ಖಾಸಗಿ ವಲಯದಲ್ಲಿ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಶರತ್, ಈಗಾಗಲೇ ಅಲ್ಲಿ ಅನಧಿಕೃತವಾಗಿ ಜಾರಿಯಲ್ಲಿರುವ ‘ಜಾತೀಯತೆ’ ಬಗ್ಗೆ ಮಾತನಾಡುತ್ತಾರೆ ಹಾಗೂ ಆ ಮೂಲಕ ಖಾಸಗಿ ವಲಯದಲ್ಲಿ ಮೀಸಲಾತಿ ಏಕೆ ಅಗತ್ಯ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸುತ್ತಾರೆ.
ಇವರ ಮನೆಗೆ ಬಂದರೆ ಕಾಫಿ ಕುಡಿಯದ ಅಯ್ಯನವರ ಮನೆ ವಿವರಣೆ ನೀಡುವಾಗ, ಒಂದು ಪ್ರಸಂಗ ನಿರೂಪಿಸಿದ್ದಾರೆ. ಅದೆಂದರೆ, ಅಯ್ಯನವರ ಮನೆಯವರು ತಮ್ಮ ಶೌಚಗುಂಡಿಯನ್ನು ತಾವೇ ಶುಚಿಗೊಳಿಸಿದ್ದು. ತಮ್ಮ ಮನೆಯಲ್ಲಿ ಕಾಫಿ ಕುಡಿಯದವರಲ್ಲೂ ಮಾದರಿಯಾಗಬಹುದಾದ ನಡೆಯೊಂದನ್ನು ಇವರು ಗುರುತಿಸಿ, ನೆನಪಿಟ್ಟುಕೊಂಡು ದಾಖಲಿಸಿದ್ದು ಸ್ತುತ್ಯಾರ್ಹ. ಆದರೆ, ನನಗೆ ಅವರು ಹಾಗೇ ಶುಚಿಗೊಳಿಸಿಕೊಂಡರೆ… ಎಂಬುದು ಇನ್ನೂ ಅಚ್ಚರಿಯೇ. ಜೊತೆಗೆ ಇಲ್ಲಿಯ ಕೆಲವು ಆಲೋಚನೆಗಳಿಗೆ ಇನ್ನೊಂದಿಷ್ಟು ದೀರ್ಘವಾಗಬಲ್ಲ ಸಾಮರ್ಥ್ಯ ಇದೆ. ಅಲ್ಲಲ್ಲಿ ಲೇಖಕರು ಯಾವುದೋ ಪ್ರಸ್ತುತ ಬೆಳವಣಿಗೆಗೆ ತಮ್ಮದೊಂದು ಅಭಿಪ್ರಾಯ ಹೇಳಲೆಂದಷ್ಟೇ ಬರೆದಿರುವಂತೆ ತೋರುತ್ತವೆ. ಜಯಂತಿಗಳ ಆಚರಣೆ ವಿಚಾರವಾಗಿ ಇವರ ಬರಹ ಅಂತಹದೊಂದು ಉದಾಹರಣೆ. ಆ ಲೇಖನದಲ್ಲಿ, ಶರತ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸದೆ, ಸರಕಾರ ಜಯಂತಿ ಮಾಡಿ ಸಾಧಿಸಿದ್ದೇನು ಎಂಬ ಪ್ರಶ್ನೆಯನ್ನೆತ್ತಿ ಸುಮ್ಮನಾಗಿಬಿಡುತ್ತಾರೆ. ಇಲ್ಲಿರುವ ಎಲ್ಲಾ ಬರಹಗಳು ಪತ್ರಿಕೆಗೆ ಬರೆದವಾದ್ದರಿಂದ, ಅಂತಹದೊಂದು ಮಿತಿ ಸಹಜ.
ಇಲ್ಲಿಯ ಬರಹಗಳ ಬಗ್ಗೆ ಅನಿಸಿಕೆ ಬರೆದುಕೊಡಿ ಎಂದ ಕಾರಣಕ್ಕೆ ನನಗನ್ನಿಸಿದ್ದನ್ನು ಇಲ್ಲಿ ದಾಖಲಿಸಿದ್ದೇನೆ. ಇದು ಇ-ಬುಕ್ ಮಾದರಿಯಲ್ಲಿ ಹೊರಬಂದಿದೆ. ನನಗೂ ಸಾಫ್ಟ್ ಕಾಪಿಯೇ ಕೊಟ್ಟಿದ್ದ ಕಾರಣವೋ ಏನೋ… ಮೊದಲ ಲೇಖನ ಓದಿದ ತಕ್ಷಣ ನನ್ನ ಬೆರಳುಗಳು ಕೆಳಗೆ ಇರಬಹುದಾದ ‘ಲೈಕ್’ ಬಟನ್ ಗೆ ಹುಡುಕುತ್ತಿದ್ದವು. ಇವನ್ನು ಓದುವ ಎಲ್ಲರಿಗೂ, ಇಲ್ಲಿಯ ಲೇಖನಗಳು ಇಷ್ಟವಾಗುತ್ತವೆ. ಯೋಚನೆಗೆ ಹಚ್ಚುತ್ತವೆ. ಆರೋಗ್ಯವಂತ ಹಾಗೂ ಸಹ್ಯ ಸಮಾಜ ರೂಪಿಸುವ ನಿಟ್ಟಿನಲ್ಲಿ ಇಲ್ಲಿಯ ಬರಹಗಳು ಕೆಲಸ ಮಾಡುತ್ತವೆ.
Release date
Ebook: 15 February 2022
English
India